LatestMuzrai News

ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಹೊಸ ಸಮಿತಿ ರಚನೆ

ಬೆಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ಮತ್ತು ಭಕ್ತಾದಿಗಳಿಗೆ ಸುಗಮ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ರೂಪಿಸುವ ಸಲುವಾಗಿ ಹೊಸ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ಮುಜರಾಯಿ ಇಲಾಖೆಯ ಆಯುಕ್ತರು ನೇಮಕಗೊಂಡಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ಕಲಂ 77 ರನ್ವಯ ಈ ಸಮಿತಿ ರಚನೆಗೆ ಅನುಮೋದನೆ ನೀಡಲಾಗಿದೆ.

ದಿನಾಂಕ 15.02.2025 ರಂದು ನಡೆದ ಸಭೆಯಲ್ಲಿ ದೇವಸ್ಥಾನದ ಮಾಸ್ಟರ್ ಪ್ಲಾನ್ ಯೋಜನೆಯ ಕುರಿತು ಹಲವಾರು ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ:

  1. ಸುತ್ತು ಗೋಪುರ ನಿರ್ಮಾಣ: ದೇವಸ್ಥಾನದ ಸುತ್ತಲೂ ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯದ ವಾಸ್ತುಶಿಲ್ಪಕ್ಕೆ ಹೊಂದುವಂತೆ ಸುತ್ತು ಗೋಪುರ (ಸುತ್ತುಪೌಳಿ) ನಿರ್ಮಾಣಕ್ಕೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.
  2. ಆಶ್ಲೇಷಬಲಿ ಮತ್ತು ಪೂಜಾ ಮಂದಿರ ನಿರ್ಮಾಣ: ತುಳಸಿತೋಟದಲ್ಲಿ ಸ್ಥಳ ಗುರುತಿಸಿ, ದೇವಾಲಯದ ವಿನ್ಯಾಸಕ್ಕೆ ಹೊಂದುವಂತೆ ಆಶ್ಲೇಷಬಲಿ ಮತ್ತು ಪೂಜಾ ಮಂದಿರ ನಿರ್ಮಾಣಕ್ಕೆ ಅಂದಾಜು ಮತ್ತು ನಕ್ಷೆ ತಯಾರಿಸಲು ನಿರ್ಧರಿಸಲಾಗಿದೆ.
  3. ಅನ್ನದಾಸೋಹ ವಿಸ್ತರಣೆ: ಪ್ರಸ್ತುತ ಇರುವ ಅನ್ನದಾಸೋಹವನ್ನು ಉಳಿಸಿಕೊಂಡು ವಿಸ್ತರಿಸಲು ಅಥವಾ ಹೊಸದಾಗಿ ದೊಡ್ಡದಾದ ದಾಸೋಹ ಭವನ ನಿರ್ಮಿಸಲು ತೀರ್ಮಾನಿಸಲಾಗಿದೆ.
  4. ರಥ ಬೀದಿ ಅಭಿವೃದ್ಧಿ: ದೇವಾಲಯದ ವಿನ್ಯಾಸಕ್ಕೆ ಹೊಂದುವಂತೆ ರಥ ಬೀದಿಯನ್ನು ಅಭಿವೃದ್ಧಿಪಡಿಸಿ, ಭಕ್ತರಿಗೆ ಕೂರಲು ಉತ್ತಮ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.
  5. ಕೊಠಡಿಗಳ ನಿರ್ಮಾಣ: ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ 800 ಕೊಠಡಿಗಳನ್ನು 4 ಬ್ಲಾಕ್‌ಗಳಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.
  6. ಶೌಚಾಲಯ ಮತ್ತು ಸ್ನಾನಗೃಹಗಳು: ಒಟ್ಟು 4 ಬ್ಲಾಕ್‌ಗಳಲ್ಲಿ 96 ಶೌಚಾಲಯಗಳು ಮತ್ತು 64 ಸ್ನಾನಗೃಹಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
  7. ವಾಣಿಜ್ಯ ಸಂಕೀರ್ಣ: ದೇವಾಲಯಕ್ಕೆ ಬರುವ ದಾರಿಯಲ್ಲಿ ಸೂಕ್ತ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ತೀರ್ಮಾನಿಸಲಾಗಿದೆ.
  8. ಪಾರ್ಕಿಂಗ್ ವ್ಯವಸ್ಥೆ: ಉತ್ತಮ ಪಾರ್ಕಿಂಗ್ ವ್ಯವಸ್ಥೆಗೆ ಅಗತ್ಯವಿರುವ ಜಮೀನು ಖರೀದಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
  9. ಡಾರ್ಮೆಟರಿ ನಿರ್ಮಾಣ: 50 ಕೊಠಡಿಗಳನ್ನು ಹೊಂದಿರುವ ಡಾರ್ಮೆಟರಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.
  10. ಕ್ಯೂ-ಲೈನ್ ಕಾಂಪ್ಲೆಕ್ಸ್: ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಕ್ಯೂ-ಲೈನ್ ಕಾಂಪ್ಲೆಕ್ಸ್ ನಿರ್ಮಿಸಲು ನಿರ್ಧರಿಸಲಾಗಿದೆ.

ಈ ಯೋಜನೆಗಳ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವನ್ನು ಮತ್ತಷ್ಟು ಸಾರ್ವಜನಿಕ ಸ್ನೇಹಿ ಮತ್ತು ಭಕ್ತಾದಿಗಳಿಗೆ ಸುಲಭವಾಗಿಸುವ ದಿಶೆಯಲ್ಲಿ ಹೆಜ್ಜೆ ಹಾಕಲಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button