LatestStateTransport

ವಾಯವ್ಯ ಸಾರಿಗೆಗೆ 425 ಸಿಸಿ ಕ್ಯಾಮೆರಾ ಬಸ್; ಸಾರಿಗೆ ಸಂಸ್ಥೆಗೆ ಮತ್ತಷ್ಟು ಹೈಟೆಕ್ ಸ್ಪರ್ಶ

‘ಶಕ್ತಿ’ ಯೋಜನೆ ಯಶಸ್ವಿಯ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲೂ ಅಭಿವೃದ್ಧಿಯ ಶಕೆ ಆರಂಭವಾಗಿದೆ. ವಿವಿಧ ಅಭಿವೃದ್ಧಿಯ ಮಜಲುಗಳನ್ನು ಕ್ರಮಿಸಿದ ಸಾರಿಗೆ ಸಂಸ್ಥೆ ಇದೀಗ ಮತ್ತೊಂದು ವ್ಯವಸ್ಥೆಗೆ ಮುನ್ನುಡಿ ಬರೆದಿದೆ. ಇದೇ ಹೊತ್ತಿಗೆ ವಾಯವ್ಯ ಸಾರಿಗೆ ನಿಗಮಕ್ಕೆ 425 ಸಿಸಿ ಕ್ಯಾಮೆರಾ ಬಸ್ ಸೇರ್ಪಡೆಯಾಗುತ್ತಿದ್ದು ಸಾರಿಗೆ ಸಂಸ್ಥೆಗೆ ಮತ್ತಷ್ಟು ಹೈಟೆಕ್ ಸ್ಪರ್ಶ ಸಿಕ್ಕಿದಂತಾಗಿದೆ.

ವಿಶೇಷ ಬಸ್‌‌ಗಳ ವೈಶಿಷ್ಟ್ಯ ಹೀಗಿದೆ: 

  • ವಾಯವ್ಯ ಸಾರಿಗೆಗೆ 425 ಸಿಸಿ ಕ್ಯಾಮೆರಾ ಬಸ್ ಸೇರ್ಪಡೆ..

  • ಬಸ್‌ನ ಮುಂದೆ- ಹಿಂದೆ ಒಂದೊಂದು ಕ್ಯಾಮೆರಾ..

  • 15 ದಿನದ ಡಾಟಾ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ.‌.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಿಸಿ ಕ್ಯಾಮೆರಾವುಳ್ಳ 425 ಬಸ್ಸುಗಳ ಸೇರ್ಪಡೆಯಾಗಿದ್ದು ಈ ಬಸ್‌‌ಗಳಲ್ಲಿ ಆಟೋಟಾಪಕ್ಕೆ ಅಂಕುಶ ಬೀಳಲಿದೆ. ಜೊತೆಗೆ ಸಾರಿಗೆ ಸಂಸ್ಥೆಯ ಮೇಲೆ ಅಪಘಾತ ಪರಿಹಾರಕ್ಕಾಗಿ ದಾಖಲಾಗುವ ಸುಳ್ಳು ಮೊಕದ್ದಮೆಗಳಿಗೂ ಕಡಿವಾಣ ಬೀಳಲಿದೆ.

 

ಆರು ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದಿಲ್ಲೊಂದು ಅಪಘಾತಗಳು ಸಂಭವಿಸುವುದು ಮಾಮೂಲಿ. ಪ್ರತಿಸಲ ಅಪಘಾತಗಳಾದಾಗಲೂ ಪರಿಹಾರ ಕೊಡುವುದು ಮಾತ್ರ ಸಾರಿಗೆ ಸಂಸ್ಥೆಯೇ. ಸಂಸ್ಥೆಯ ಚಾಲಕರ ತಪ್ಪು ಇಲ್ಲದಿದ್ದರೂ ಸಂಸ್ಥೆಯ ಮೇಲೆಯೇ ಕೇಸ್ ದಾಖಲಾಗುತ್ತಿರುತ್ತದೆ. ಸಂಸ್ಥೆಯ ಚಾಲಕರ ತಪ್ಪಿಲ್ಲ ಎಂದೂ ಸಾಬೀತುಪಡಿಸಲು ಸಾಧ್ಯವಾಗಲ್ಲ. ಸಾಕ್ಷ್ಯಗಳ ಕೊರತೆಯಿಂದ ಅನಿವಾರ್ಯವಾಗಿ ಪರಿಹಾರ ಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸದ್ಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ರೂ 66  ಕೋಟಿ ಪರಿಹಾರ ನೀಡುವುದು ಬಾಕಿಯಿದೆ.

ಇನ್ನು ಚಾಲಕರು ಕೂಡ ನಿರ್ಲಕ್ಷ್ಯ ಚಾಲನೆ, ಎಲ್ಲಿ ಬೇಕೋ ಅಲ್ಲಿ ನಿಲ್ಲಿಸುವುದು. ಕೆಲವೊಂದು ಬಸ್ ನಿಲ್ದಾಣಗಳನ್ನು ಮರೆಮಾಚಿ ತೆರಳುವುದು, ಸ್ಪೀಡ್ ಲಿಮಿಟ್ ಮೀರಿ ಓವರ್ ಸ್ಪೀಡ್ನಲ್ಲೇ ವಾಹನ ಚಲಾಯಿಸುವುದು ಈ ಬಗ್ಗೆ ಪ್ರಯಾಣಿಕರಿಂದ, ಸಾರ್ವಜನಿಕರಿಂದ ದೂರುಗಳು ನಿತ್ಯ ಬರುತ್ತಲೇ ಇರುತ್ತವೆ. ಇವೆಲ್ಲಕ್ಕೂ ಪರಿಹಾರವೆಂದರೆ ಸಿಸಿ ಕ್ಯಾಮೆರಾ ಅಳವಡಿಸುವುದು. ಅಂತಹ ಬಸ್‌ಗಳನ್ನೀಗ ಸರ್ಕಾರವೇ ಸಂಸ್ಥೆಗೆ ನೀಡಿದೆ.

ಬರೋಬ್ಬರಿ 425 ಬಸ್ ಗಳು ಸಂಸ್ಥೆಗೆ ಹೊಸದಾಗಿ ಸೇರ್ಪಡೆಯಾಗಿದ್ದು, ಈ ಬಸ್ ಗಳಿಗೆ ಹಿಂದೊಂದು, ಮುಂದೊಂದು ಸಿಸಿ ಕ್ಯಾಮೆರಾಗಳಿವೆ. ಬಸ್‌ನಲ್ಲೇ ಕ್ಯಾಮೆರಾ ಫುಟೇಜ್ ಸಂಗ್ರಹಿಸುವ ವ್ಯವಸ್ಥೆಯಿದೆ. ಸುಮಾರು 1 ಟಿಬಿಯಷ್ಟು ಫುಟೇಜ್ ಸಂಗ್ರಹಿಸಬಹುದಾಗಿದೆ. 15 ದಿನದ ದೃಶ್ಯಾವಳಿಗಳೆಲ್ಲ ಬಸ್ ಸ್ಟೋರೇಜ್ ನಲ್ಲಿ ಲಭ್ಯವಾಗಿರುತ್ತವೆ. ಅವುಗಳನ್ನು ಪೆನ್ಡ್ರೈವ್ ಮೂಲಕ ಡೌನ್ಫೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಬಸ್‌ನ ಹಿಂದೆಯಾಗಲಿ, ಮುಂದಿನಿಂದಾಗಲಿ ಯಾವುದೇ ವಾಹನದೊಂದಿಗೆ ಅಪಘಾತವಾದರೂ ಆ ದೃಶ್ಯಗಳೆಲ್ಲ ರೆಕಾರ್ಡ್ ಆಗುತ್ತವೆ. ಜೊತೆಗೆ ವಾಹನ ಪಾರ್ಕ್ ಮಾಡಲು ಈ ಕ್ಯಾಮೆರಾ ನೆರವಾಗುತ್ತದೆ. ಯಾರೇ ಆಗಲಿ ಸಾರಿಗೆ ಸಂಸ್ಥೆಯ ಬಸ್ಸೇ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸುಳ್ಳು ಮೊಕದ್ದಮೆ ದಾಖಲಿಸಲು ಸಾಧ್ಯವಾಗಲ್ಲ. ಜತೆಗೆ ಚಾಲಕ ಕೂಡ ಎಲ್ಲಿ ಎಷ್ಟು ಗಂಟೆಗೆ ತೆರಳಿದ. ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದನೇ ಎಂಬಂತಹ ಮಾಹಿತಿ ಕೂಡ ಲಭ್ಯವಾಗುತ್ತದೆ. ಹೀಗಾಗಿ ಸಿಸಿ ಕ್ಯಾಮೆರಾದಿಂದ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದರೊಂದಿಗೆ ಬಸ್ ನಲ್ಲಿ ಜಿಪಿಎಸ್ ಕೂಡ ಅಳವಡಿಕೆ ಇರುವುದರಿಂದ ಯಾವ ಬಸ್ ಎಷ್ಟು ಗಂಟೆಗೆ ಎಲ್ಲಿತ್ತು ಎಂಬುದರ ಮಾಹಿತಿಯೂ ಸಮರ್ಪಕವಾಗಿ ಲಭ್ಯವಾಗುತ್ತದೆ. ಒಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಾಗಿರುವ ಬಸ್ ಬಂದಿರುವುದರಿಂದ ಬಸ್‌ ಗಳ ಚಲನ-ವಲನದ ಮೇಲೆ ಸಂಸ್ಥೆ ಸಮರ್ಪಕವಾಗಿ ನಿಗಾವಹಿಸಲು ಅನುಕೂಲವಾಗಲಿದೆ ಎಂದವರು ಹೇಳಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button