AggregatorLatestTransport

ಸಾರಿಗೆ ವ್ಯವಸ್ಥೆಯನ್ನು ’ಅಗತ್ಯ ಸೇವೆ’ಯಡಿ ತರಬಾರದೇಕೆ? ಹಬ್ಬದ ವೇಳೆ ದರ ಏರಿಕೆಯ ಆಘಾತ, ಕಾನೂನು ಏನು ಹೇಳುತ್ತೆ?

Bus Transport Under Essential Service : ವಾರಾಂತ್ಯದಲ್ಲಿ ಬಸ್, ವಿಮಾನಯಾನದ ದರ ಏರಿಕೆ ಎಂದಿನಂತೆ ಮುಂದುವರಿದಿದೆ. ಕೋವಿಡ್ ವೇಳೆ ನಷ್ಟ ಎದುರಿಸುತ್ತಿದ್ದೇವೆ ಎನ್ನುವ ನೆಪದಿಂದ ಆರಂಭವಾದ…

ಹೈಲೈಟ್ಸ್‌:

  • ಹಬ್ಬದ ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದರಂತೂ ಮುಗಿಯಿತು
  • ಮೂರು ಪಟ್ಟು ಹೆಚ್ಚು ದರ ಏರಿಸುವ ಖಾಸಗಿ, ಸರ್ಕಾರೀ ಬಸ್ ಸಂಸ್ಥೆಗಳು
  • ಸಾರಿಗೆ ವ್ಯವಸ್ಥೆಯನ್ನು ಅಗತ್ಯ ಸೇವೆಯಡಿ ತಂದರೆ, ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು : ಮುಂಚೆಯೆಲ್ಲಾ ಹಬ್ಬಹರಿದಿನಗಳ ವೇಳೆ ಖಾಸಗಿ ಬಸ್ಸುಗಳು ದರವನ್ನು ಏರಿಸುತ್ತಿದ್ದವು. ಇದಾದ ನಂತರ, ವಾರದ ದಿನಗಳಲ್ಲಿ ಒಂದು ರೇಟು, ವಾರಾಂತ್ಯಕ್ಕೆ ಇನ್ನೊಂದು ರೇಟು ಫಿಕ್ಸ್ ಮಾಡಿದವು. ಎಲ್ಲದಕ್ಕೂ, ವಿಧಿಯಿಲ್ಲದೇ, ಹಿಡಿಶಾಪ ಹಾಕಿ, ಹೆಚ್ಚುವರಿ ದರವನ್ನು ಪಾವತಿಸುವ ಅನಿವಾರ್ಯತೆಯಲ್ಲಿ ಪ್ರಯಾಣಿಕರು ಮಾತ್ರ ತತ್ತರಿಸಿ ಹೋಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇದು ಖಾಸಗಿ ಬಸ್ಸಿಗೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ಈ ಪರಿಪಾಠ ಆರಂಭಿಸಿದೆ. ಹೆಚ್ಚುವರಿ ಬಸ್ಸುಗಳನ್ನು ಬಿಟ್ಟಂತಹ ಸಂದರ್ಭದಲ್ಲಿ, ಕೆಎಸ್‌ಆರ್‌ಟಿಸಿ ಸಂಸ್ಥೆ ಕೂಡಾ ಖಾಸಗಿ ಸಂಸ್ಥೆಗಳಿಗೆ ಪೈಪೋಟಿಗೆ ಬಿದ್ದಂತೆ ಪರಿಷ್ಕೃತ ದರವನ್ನು ಪ್ರಕಟಿಸುತ್ತದೆ.

ಬರೀ ಬಸ್ಸುಗಳೇ ಏಕೆ, ವಿಮಾನಯಾನ ಸಂಸ್ಥೆಗಳು ಕೂಡಾ ಇದಕ್ಕೆ ಹಿಂದೆ ಬಿದ್ದಿಲ್ಲ. ಕೆಲವೇ ಕೆಲವು ದಿನಗಳ ಹಿಂದಿನ ಉದಾಹರಣೆಯನ್ನು ಕೊಡುವುದಾದರೆ, ರಾಜಧಾನಿಯಿಂದ ಕರಾವಳಿಗೆ ಸಂಪರ್ಕಿಸುವ ಶಿರಾಡಿ, ಸಂಪಾಜೆ ಘಾಟ್ ಬಂದ್ ಆದಂತಹ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ಮೂರು ಪಟ್ಟು ದರವನ್ನು ಏರಿಸಿದ್ದವು.

ಸಾಮಾನ್ಯದ ದಿನಗಳಲ್ಲಿ, ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ದರ 4 – 5ಸಾವಿರ ಇದ್ದರೆ, ಘಾಟ್ ಬ್ಲಾಕ್ ಆದಂತಹ ಸಂದರ್ಭದಲ್ಲಿ 17 – 20 ಸಾವಿರದ ವರೆಗೆ ದರ ಫಿಕ್ಸ್ ಮಾಡಿ ಹಗಲು ದರೋಡೆ ಮಾಡಿದ್ದವು. ಪ್ರಯಾಣಿಕರ ತೀರಾ ಅನಿವಾರ್ಯತೆಯಿಂದಾಗಿ, ದರ ಮೂರು ಪಟ್ಟು ಹೆಚ್ಚಾದರೂ, ವಿಮಾನಗಳಲ್ಲಿ ಸೀಟ್ ಖಾಲಿಯಿರಲಿಲ್ಲ.

ಲಗಾಮೇ ಇಲ್ಲದ ಬಸ್ ದರ ಏರಿಕೆ
ಹಬ್ಬದ ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದರಂತೂ, ಬಸ್ ದರದ ಏರಿಕೆಗೆ ಲಗಾಮೇ ಇಲ್ಲ. ಸಾಮಾನ್ಯದ ದಿನಗಳಲ್ಲಿ ಬೆಂಗಳೂರಿನಿಂದ ಉಡುಪಿಗೆ 900-1,000 ಸಾವಿರ ರೂಪಾಯಿ ಇರುತ್ತದೆ. ಇದೇ ದರ, ಸ್ವಾತಂತ್ರ್ಯೋತ್ಸವ, ವರಮಹಾಲಕ್ಷ್ಮೀ ರಜೆಯ ವೇಳೆ 1,800 – 2,500 ಸಾವಿರ ರೂಪಾಯಿವರೆಗೆ ಇದೆ. ಬೆಂಗಳೂರಿನಿಂದ ದಾವಣಗೆರೆಗೆ 800-900 ಇದ್ದ ದರ, ವಾರಾಂತ್ಯಕ್ಕೆ 1,300-1,500 ರೂಪಾಯಿ ಇದೆ.

ಇದೇ ರೀತಿಯ ದರ ನಿಗದಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಕೂಡಾ ಇದೆ. ಅಗ್ರಿಗೇಟರ್ ಸರ್ವಿಸ್ ಸಂಸ್ಥೆಗಳಾದ ರೆಡ್ ಬಸ್, ಅಭಿಬಸ್ ಮುಂತಾದ ಸಂಸ್ಥೆಗಳಲ್ಲಿ, ಕೆಎಸ್‌ಆರ್‌ಟಿಸಿ ಬಸ್ ಬುಕ್ಕಿಂಗ್ ಕೂಡಾ ಇರುವುದರಿಂದ, ಇದಕ್ಕೆ ಹೊಣೆಗಾರರು ಯಾರು? ಸಾರಿಗೆ ಇಲಾಖೆ ಏನು ಕಾನೂನನ್ನು ರೂಪಿಸಿದೆ.

ಅಗ್ರಿಗೇಟರ್ ಸರ್ವಿಸ್ ಸಂಸ್ಥೆಗಳಾದ ರೆಡ್ ಬಸ್, ಅಭಿಬಸ್
ಜನರ ಬೇಡಿಕೆಯಂತೆ ಬಸ್ ದರವನ್ನು ಒಂದೂವರೆ ಪಟ್ಟು ಹೆಚ್ಚಿಸುವ ಅವಕಾಶ ಟ್ರಾನ್ಸಪೋರ್ಟ್ ಕಾಯಿದೆಯ ಪ್ರಕಾರ ಇದೆ. ಅದೇ ರೀತಿ, ಒಂದು ರೂಟ್ ನಲ್ಲಿ ತಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಲು, ಮೂಲ ದರಕ್ಕಿಂತ ಕಮ್ಮಿ ದರ ನಿಗದಿ ಪಡಿಸುವ ಹಾಗಿಲ್ಲ. ಉದಾಹರಣೆಗೆ, ಬೆಂಗಳೂರಿನಿಂದ ಹೈದರಾಬಾದ್ ರೂಟ್ ನಲ್ಲಿ ಪ್ರಾಭಲ್ಯ ಹೆಚ್ಚಿಸಿಕೊಳ್ಳಲು, ಮೂಲದರ 1,500 ಸಾವಿರ ಇದ್ದರೆ, ಇದಕ್ಕಿಂತ ಕಮ್ಮಿದರದಲ್ಲಿ ಬಸ್ ಓಡಿಸುವ ಹಾಗಿಲ್ಲ.

ರಾಷ್ಟ್ರೀಯ ಹೆದ್ದಾರಿ ಹಾಗೂ ಮೋಟಾರ್ ಟ್ರಾನ್ಸಪೋರ್ಟ್ ಇಲಾಖೆ
” ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಹಾಗೂ ಮೋಟಾರ್ ಟ್ರಾನ್ಸಪೋರ್ಟ್ ಇಲಾಖೆ 2019 ರಲ್ಲಿ ಹೊರಡಿಸಿದ ಸುತ್ತೋಲೆಯಂತೆ (ಸರ್ಕೂಲರ್ S.O 4251) ಒಂದೂವರೆ ಪಟ್ಟು, ಪ್ರಯಾಣಿಕರ ಬೇಡಿಕೆಯಂತೆ ಬೆಲೆ ಏರಿಕೆ ಮಾಡಲು ಅವಕಾಶ ಇದೆ. ವಾಹನಗಳನ್ನು ನಿಯಮಿತವಾಗಿ, ಯಾವ ರೂಟ್ ನಲ್ಲಿ ಸರ್ವೀಸ್ ಇಲ್ಲದೇ, ವಿಶೇಷ ದಿನಗಳಂದು, ಏಜೆಂಟರುಗಳು ಬಸ್ಸುಗಳನ್ನು ವಿಶೇಷವಾಗಿ ಬಾಡಿಗೆ ಪಡೆದು ರಸ್ತೆ ಸೇವೆಗಾಗಿ ಇರಿಸುವುದರಿಂದ ದರ ಅಧಿಕ ಆಗುವುದು ಸಾಮಾನ್ಯ” – ರಾಧಾಕೃಷ್ಣ ಹೊಳ್ಳ.

ಟ್ರಾವೆಲ್ಸ ಮಾಲಿಕರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಹೊಳ್ಳ
” ಆದರೆ, ಅದೇ ರಸ್ತೆಯಲ್ಲಿ ನಿಯಂತ್ರಕವಾದ ಪರವನಾಗಿ ಹೊಂದಿರುವ ಅಂತರ್ ರಾಜ್ಯ ವಾಹನಗಳು ಸರ್ಕಾರದ ನಿಯಂತ್ರಣದಲ್ಲಿ ನಿಗದಿ ಆದ ದರವನ್ನೆ ಬಳಕೆ ಮಾಡಬೇಕಾಗುತ್ತದೆ. ಅವಕಾಶವನ್ನು ಕೃತಕ ಬೇಡಿಕೆಯಾಗಿ ಸೃಷ್ಟಿಸಿದ್ದಲ್ಲಿ ಏಜೆಂಟರ ಮೇಲೆ ಅಥವಾ ಇ-ಕಾಮರ್ಸ ಲೈಸೆನ್ಸಿನ ತಂತ್ರಜ್ಞಾನ ಸಂಸ್ಥೆಗಳ ಮೇಲೆ ಇಲಾಖೆ ಕ್ರಮ ತಗೊಳ್ಳುವ ಅಧಿಕಾರ ಇದೆ” ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘದ (ರಿ) ಅಧ್ಯಕ್ಷರಾದ ರಾಧಾಕೃಷ್ಣ ಹೊಳ್ಳ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ
” ಲಕ್ಸುರಿ ಸೇವೆಗಳಿಗೆ ದರ ಏರಿಕೆ/ಇಳಿಕೆಯ ಅವಕಾಶವಿದೆ. ಪ್ರಮುಖವಾಗಿ, ಕರ್ನಾಟಕದಲ್ಲಿ ಶಕ್ತಿ ಯೋಜನೆಯಿಂದ ಖಾಸಗಿ ಬಸ್ಸುಗಳಿಗೆ ತೀವ್ರ ಹೊಡೆತ ಬಿದ್ದಿದೆ. ಮಳೆ, ಭೂಕುಸಿತದಿಂದ ಎಷ್ಟೋ ಬಸ್ಸುಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಆಡಳಿತಾತ್ಮಕವಾಗಿ ನಮಗೂ ಸಮಸ್ಯೆಗಳಿವೆ, ಅಗ್ರಿಗೇಟರ್ ಸಂಸ್ಥೆಗಳು ಬಸ್ ದರ ಏರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ” – ನಟರಾಜ್ ಶರ್ಮಾ, ಕರ್ನಾಟಕ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷರು.

Show More

Related Articles

Leave a Reply

Your email address will not be published. Required fields are marked *

Back to top button